By Lekha |

ಕೋವಿದ್ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ಆಡಳಿತ ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಚುರುಕುಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದಲ್ಲಿ ಅಪರೂಪವೇ ಆಗಿರುವ ನಾಗರಿಕ ಹೊಣೆಗಾರಿಕೆ ಮತ್ತು ಮಾನವ ಸಂವೇದನೆ ಕೊಂಚವಾದರೂ ಕಾಣುವಂತಿರಬೇಕಿತ್ತು. ದಿನನಿತ್ಯ ಸಾವುಗಳನ್ನು ಎಣಿಸುವ ಅಧಿಕಾರ ಕೇಂದ್ರಗಳಲ್ಲಿ ಪ್ರತಿಯೊಂದು ಸಾವು ಮನಸನ್ನು ಪ್ರಕ್ಷುಬ್ಧಗೊಳಿಸುವ ವಿಕ್ಷಿಪ್ತತೆಯನ್ನು ಉಂಟುಮಾಡಬೇಕಿತ್ತು. ಇಡೀ ಸಮಾಜವೇ ಆರೋಗ್ಯದಿಂದಿದೆ ಎನ್ನುವ ಭ್ರಮೆಯಲ್ಲಿದ್ದ ಪ್ರಜೆಗಳಿಗೆ ಒಮ್ಮಿಂದೊಮ್ಮೆಲೆ ಸರಣಿ ಸಾವುಗಳು ಎದುರಾದಾಗ ನಮ್ಮ ಸಮಾಜ ಆಘಾತಕ್ಕೊಳಗಾಗಬೇಕಿತ್ತು. ಅಧಿಕಾರ ಪೀಠಗಳಲ್ಲಿರುವವರು, ಆಡಳಿತ ನಿರ್ವಹಣೆಯ ಹೊಣೆ ಹೊತ್ತವರು ಕನಿಷ್ಟ ತಮ್ಮ ವ್ಯಾಪ್ತಿಯಲ್ಲಿ ಉಂಟಾಗುವ ವ್ಯತ್ಯಯಗಳಿಂದ ಎಚ್ಚೆತ್ತುಕೊಳ್ಳಬೇಕು ಎಂಬ ನಿರೀಕ್ಷೆ ತಪ್ಪೇನಲ್ಲ. ಈ ನಿರೀಕ್ಷೆ, ಅಪೇಕ್ಷೆಯ ನಡುವೆಯೇ ನಮ್ಮ ನಡುವೆ ಅಸಹಜ ಸಾವುಗಳ ಮಹಾಪೂರವೇ ಹರಿದುಬಂದಿರುವುದನ್ನು ನೋಡಿದ್ದೇವೆ. ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದರೂ ಮುಚ್ಚಿಟ್ಟ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಸಾವು ಇಂದಿಗೂ ಜನರನ್ನು ಕಾಡುತ್ತಿದೆ. ದೂರದ ಗಂಗಾ ತೀರದಲ್ಲಿ ತೇಲಿಬರುತ್ತಿರುವ ಹೆಣಗಳು ಕೋವಿದ್ ಸೋಂಕಿತರ ಹೆಣಗಳಾಗಿ ಕಾಣುವುದಿಲ್ಲ. ಗಂಗೆಗೂ ಅನಾಥ ಶವಗಳಿಗೂ ಚಾರಿತ್ರಿಕವಾಗಿಯೇ ಅವಿನಾಭಾವ ಸಂಬಂಧವಿರುವುದರಿಂದ ಇದು ಸಹಜ ಪ್ರಕ್ರಿಯೆ ಎಂದೇ ಭಾವಿಸಿದರೆ ಅಚ್ಚರಿಯೇನಲ್ಲ. ಕರ್ನಾಟಕದಲ್ಲೂ ಅನಾಥ ಶವಗಳಿವೆ. ಇಲ್ಲಿ ಪ್ರಶ್ನೆ ಇರುವುದು ವೈದ್ಯಕೀಯವಾಗಿ ನಮ್ಮ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸಬೇಕಿದ್ದ ಕೊರೋನಾ ಹೇಗೆ ಇಂತಹ ನಿಷ್ಕ್ರಿಯತೆಯನ್ನು ಸೃಷ್ಟಿಸಿದೆ ?

ಕೊರೋನಾ ಸೋಂಕು ಕಡಿಮೆ ಮಾಡಲು ಲಾಕ್‍ಡೌನ್ ವಿಧಿಸಿ, ಪರೀಕ್ಷೆಗಳ ಪ್ರಮಾಣವನ್ನು ತಗ್ಗಿಸಿ ಸಾವುಗಳ ಲೆಕ್ಕಾಚಾರದಲ್ಲಿ ಕೊಂಚ ವ್ಯತ್ಯಯ ಮಾಡುತ್ತಾ “ ನಾವು ಗೆದ್ದೆವು ” ಎಂದು ಬೀಗುವ ಎಲ್ಲ ಪ್ರಯತ್ನಗಳೂ ನಮ್ಮ ನಡುವೆ ನಡೆಯುತ್ತಿವೆ. ಈ ಪ್ರಯತ್ನಗಳ ನಡುವೆಯೇ ನಮ್ಮೊಳಗಿನ ಅಸೂಕ್ಷ್ಮತೆಗಳೂ ಹೊರಬರುತ್ತಿವೆ. ಇಷ್ಟರ ನಡುವೆ ರಾಜ್ಯದಲ್ಲಿ ಮೂರು ಮಹಾ ದುರಂತಗಳು ಸಂಭವಿಸಿವೆ. ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ. 24 ಅಮಾಯಕ ಜನರು ಅಸಹಜ ಸಾವಿಗೀಡಾಗಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ತನಿಖೆ ಚಾಲ್ತಿಯಲ್ಲಿದೆ. ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಜಿಲ್ಲಾಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಕೆ ಇಲ್ಲದೆ 24 ಜೀವಗಳು ಬಲಿಯಾಗಿರುವ ಸಂದರ್ಭದಲ್ಲೂ, ಆಡಳಿತಾರೂಢ ಸರ್ಕಾರ ಖರೀದಿ-ಪೂರೈಕೆ-ದಾಸ್ತಾನು-ಆದೇಶ ಮತ್ತಿತರ ಅಲಂಕಾರಿಕ ಪದಗಳ ಸುತ್ತ ಗಿರಕಿ ಹೊಡೆಯುತ್ತಿರುವುದನ್ನು ನೋಡಿದರೆ, ಸರ್ಕಾರ ಘೋಷಿಸಿದ ತಲಾ 2 ಲಕ್ಷ ರೂಗಳ ಪರಿಹಾರವೇ ಅಂತಿಮ ನ್ಯಾಯ ಎಂದು ಕಾಣುತ್ತಿದೆ.

ಜಿಲ್ಲೆಯಲ್ಲಿ ನಡೆದ ಇಂತಹ ಒಂದು ಹೃದಯವಿದ್ರಾವಕ ದುರಂತಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಅಲ್ಲಿನ ಶಾಸಕರು ಮತ್ತು ಕೊಂಚಮಟ್ಟಿಗೆ ಸಂಸದರು ಸ್ವಪ್ರೇರಣೆಯಿಂದಲೇ ಹೊಣೆ ಹೊರಬೇಕಿತ್ತು. ಸಾರ್ವಜನಿಕವಾಗಿ ಖುಲ್ಲಂಖುಲ್ಲಾ ಕಾಣುವ ಇಂತಹ ಪ್ರಮಾದದ ಬಗ್ಗೆ ತನಿಖೆ ಪೂರ್ಣಗೊಳಿಸಲು ಒಂದು ತಿಂಗಳ ಅವಧಿ ಅವಶ್ಯವೇ ? ಆದರೆ ಸಾರ್ವಜನಿಕ ಪ್ರಜ್ಞೆ ಇರುವ ಯಾರಿಗಾದರೂ ಮೂಡಲೇಬೇಕಾದ ಒಂದು ಪ್ರಶ್ನೆ ಎಂದರೆ, ಒಂದು ವೇಳೆ ಸಾವಿಗೀಡಾದ 24 ಜನರು ಯಾವುದೋ ಒಂದು ಪಕ್ಷದ, ಸಂಘಟನೆಯ ಅಥವಾ ಗುಂಪಿನ ಕಾರ್ಯಕರ್ತರೋ ಅಥವಾ ನಾಯಕರೋ ಆಗಿದ್ದಲ್ಲಿ ಪರಿಸ್ಥಿತಿ ಏನಾಗಬಹುದಿತ್ತು ?

ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲೇ ಮತ್ತೊಂದು ಘಟನೆ ಸಂಭವಿಸಿದೆ. ಮೂಕನಹಳ್ಳಿ ಗ್ರಾಮದಲ್ಲಿ ಒಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ಕುಟುಂಬವೇ ಕೂಲಿ ಮಾಡುವ ಮೂಲಕವೇ ಜೀವನ ನಿರ್ವಹಣೆ ಮಾಡುತ್ತಿದ್ದು, ಕುಟುಂಬದ ಮುಖ್ಯಸ್ಥ ಮಹದೇವಪ್ಪ ಅವರಿಗೆ ಕೋವಿದ್ ಕಾರಣದಿಂದ ಕೂಲಿ ಮಾಡಲೂ ಸಾಧ್ಯವಾಗದೆ, ಬಹುಶಃ ಬಡತನದ ಬೇಗೆಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಕುಟುಂಬದ ನಾಲ್ವರೂ ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಬೇಸಾಯ ಮಾಡಿಕೊಂಡು, ಹಸು ಸಾಕಾಣಿಕೆ ಮೂಲಕ ಹಾಲು ಮಾರಾಟ ಮಾಡುತ್ತಾ ಬದುಕು ಸವೆಸುತ್ತಿದ್ದ ಈ ಕುಟುಂಬ ಬಹುಶಃ ಕೂಲಿಯೂ ಇಲ್ಲದೆ, ಕೃಷಿ ಆದಾಯವೂ ಇಲ್ಲದೆ ಆತ್ಮಹತ್ಯೆಯ ಹಾದಿ ಹಿಡಿದಿದೆ ಎನಿಸುತ್ತದೆ. ಮಹದೇವಪ್ಪನವರಿಗೆ ಕೊರೋನಾ ಸೋಂಕು ಉಂಟಾಗಿ ಗುಣಮುಖರಾಗಿದ್ದರೂ ಅವರ ಬಳಿ ಯಾರೂ ಹಾಲು ಕೊಳ್ಳುತ್ತಿರಲಿಲ್ಲ ಎನ್ನುವ ಸಂಶಯವೂ ಇದೆ.

ಈ ಸಾವಿಗೆ ಯಾರು ಹೊಣೆ ? ನಾಲ್ಕು ಲಕ್ಷ ರೈತರ ಆತ್ಮಹತ್ಯೆಯನ್ನೇ ಗಂಭೀರವಾಗಿ ಪರಿಗಣಿಸದೆ, ಕ್ಷುಲ್ಲಕ ಎಂದು ಭಾವಿಸುವ ಆತ್ಮನಿರ್ಭರ ಭಾರತದಲ್ಲಿ ಮೂಕನಹಳ್ಳಿಯ ನಾಲ್ಕು ಅನಾಥ ಶವಗಳು ಗಣನೆಗೇ ಬರುವುದಿಲ್ಲ. ಏಕೆಂದರೆ ಬಡತನ, ಹಸಿವು, ದಾರಿದ್ರ್ಯ ಮತ್ತು ಜೀವನೋಪಾಯದ ಸಂಕಷ್ಟಗಳಿಂದ ಸಾವಿನ ಹಾದಿ ಹಿಡಿಯುವ ಬಡ ಕುಟುಂಬಗಳ ಬಗ್ಗೆ ನಮ್ಮ ಆಳುವ ವರ್ಗಗಳು ಯಾವುದೇ ಸಂದರ್ಭದಲ್ಲೂ ಕಾಳಜಿ ವಹಿಸಿಲ್ಲ. ಇಂತಹ ಅನಾಥ ಶವಗಳು ಗಂಗೆಯಲ್ಲಿ ತೇಲದೆ ಇರಬಹುದು ಆದರೆ ಭಾರತದ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಲೇ ಇವೆ. ವಿದರ್ಭದ ಕಬ್ಬು ಬೆಳೆಗಾರನೋ, ಪಂಜಾಬಿನ ಗೋಧಿ ಬೆಳೆಯುವವನೋ, ಮೂಕನಹಳ್ಳಿಯ ಕೃಷಿ ಕೂಲಿಯೋ, ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ನಿಕೃಷ್ಟವಾಗಿಬಿಡುತ್ತಾರೆ. ಹಾಗಾಗಿಯೇ ಈ ನಾಲ್ಕು ಸಾವುಗಳು ನಮ್ಮ ಜನಪ್ರತಿನಿಧಿಗಳಿಗೆ ಗಂಭೀರ ಪ್ರಕರಣ ಎನಿಸಿಯೇ ಇಲ್ಲ. ನಿತ್ಯ ಸಾವುಗಳಿಗೆ ದುಃಖಿಸುವವರೇ ಇರುವುದಿಲ್ಲ, ಕೊರೋನಾ ಸಂದರ್ಭದಲ್ಲಿ ಇಂತಹ ಅಸಹಜ ಸಾವುಗಳೂ ನಿತ್ಯಸಾವುಗಳೇ ಆಗಿಬಿಟ್ಟಿವೆ. ಮತ್ತೊಂದು ಘಟನೆಯಲ್ಲಿ ರಾಜಧಾನಿಯ ಸಮೀಪದಲ್ಲೇ ಇರುವ ರಾಮನಗರ ತಾಲ್ಲೂಕಿನ ಐಜೂರು ಗ್ರಾಮದಲ್ಲಿ, ನಿರ್ಮಾಣ ಹಂತದ ಮ್ಯಾನ್‍ಹೋಲ್‍ಗೆ ಇಳಿದ ಮೂವರು ಪೌರ ಕಾರ್ಮಿಕರು ವಿಷಾನಿಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ತೆಗೆಯಲು 15 ಅಡಿ ಆಳದಲ್ಲಿನ ಮ್ಯಾನ್‍ಹೋಲ್‍ಗೆ ಮೂವರೂ ಇಳಿದಿದ್ದರು ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಮ್ಯಾನ್‍ಹೋಲ್‍ನಲ್ಲಿ ಕಾರ್ಯನಿರ್ವಹಿಸುವವರ ಬಗ್ಗೆ ಮುನ್ನೆಚ್ಚರಿಕೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇದ್ದುದೇ ದುರಂತಕ್ಕೆ ಕಾರಣವಾಗಿದೆ. ಮೂರು ಕುಟುಂಬಗಳು ಅನಾಥವಾಗಿವೆ. ನಿರ್ಮಲೀಕರಣ ಕಾರ್ಯಕರ್ತರಿಗೆ ಸೂಕ್ತ ಸುರಕ್ಷತೆಯ ಉಪಕರಣಗಳನ್ನು ಒದಗಿಸಬೇಕು ಎನ್ನುವ ನಿಯಮದ ಉಲ್ಲಂಘನೆ ಈ ಮೂವರು ಅಮಾಯಕರ ಸಾವಿಗೆ ಕಾರಣವಾಗಿದೆ.

ಇಲ್ಲಿ ಗುತ್ತಿಗೆದಾರ, ಕಾಮಗಾರಿ ಕೈಗೊಂಡ ನಗರಸಭೆಯ ಆಡಳಿತ ವ್ಯವಸ್ಥೆ, ಕಾಮಗಾರಿಯ ಮೇಲ್ವಿಚಾರಣೆ ವಹಿಸುವ ನಿರ್ವಾಹಕ ಇಂಜಿನಿಯರ್ ಮತ್ತು ಕೊರೋನಾ ಸಂದರ್ಭದ ನಿರ್ಬಂಧಗಳ ನಡುವೆಯೂ ಮುನ್ನೆಚ್ಚರಿಕೆ ವಹಿಸದೆ ಇಂತಹ ಕಾಮಗಾರಿಗಳನ್ನು ನಡೆಸುವ ಅಧಿಕಾರ ವರ್ಗಗಳು ಶಿಕ್ಷಾರ್ಹವಾಗುತ್ತವೆ. ಇಲ್ಲಿಯೂ ಮತ್ತದೇ ಮರಣೋತ್ತರ ಪರೀಕ್ಷೆ, ತನಿಖೆ, ವಿಚಾರಣೆ ಮತ್ತು ಜನಪ್ರತಿನಿಧಿಗಳ ಒತ್ತಾಸೆಗೆ ಮಣಿದು ಹಣಕಾಸಿನ ಪರಿಹಾರ ಇಷ್ಟರಲ್ಲೇ ನ್ಯಾಯ ವ್ಯವಸ್ಥೆ ತೃಪ್ತಿಪಟ್ಟುಕೊಳ್ಳುತ್ತದೆ. ಮ್ಯಾನ್‍ಹೋಲ್‍ಗಳಲ್ಲಿ ಉಸಿರುಗಟ್ಟಿ ಸಾಯುವ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇದ್ದರೂ ಈ ರೀತಿಯ ನಿರ್ಲಕ್ಷ್ಯವೂ ಸಹ ಮುಂದುವರೆಯುತ್ತಲೇ ಇದೆ. ಮೃತಪಟ್ಟ ಮೂವರು ಕೂಲಿ ಕಾರ್ಮಿಕರು ಮತ್ತೊಂದು ಅಸ್ಮಿತೆ ಇಲ್ಲದ, ಅಸ್ತಿತ್ವ ಇಲ್ಲದ ಅನಾಥ ಶವಗಳಾಗಿಬಿಡುತ್ತಾರೆ. ಪರಿಹಾರದ ಚೆಕ್ ನೀಡುವ ಮೂಲಕ ಜನಪ್ರತಿನಿಧಿಗಳು ಮತ್ತು ಸರ್ಕಾರ ನ್ಯಾಯ ವ್ಯವಸ್ಥೆಯ ಬಾಗಿಲಿಗೆ ಬೀಗ ಜಡಿಯುತ್ತದೆ.

ಈ ಮೂರೂ ಘಟನೆಗಳನ್ನು ಸಮಾನ ಎಳೆಯಲ್ಲಿ ಬಂಧಿಸಿ ನೋಡಿದಾಗ ಸರ್ಕಾರದ, ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆ, ನಿರ್ದಯತೆ, ನಿರ್ಭಾವುಕತೆ ಮತ್ತು ನಿರ್ಲಕ್ಷ್ಯ ಕಾಣುವುದು ಸುಲಭ. ಜೀವನ ಮತ್ತು ಜೀವನೋಪಾಯ ಎಂದರೆ ಕೇವಲ ಎರಡು ಹೊತ್ತಿನ ಕೂಳು ಮತ್ತು ಒಂದು ಸೂರು ಒದಗಿಸುವುದು ಮಾತ್ರ ಎಂದು ಭಾವಿಸುವ ಒಂದು ಮಾರುಕಟ್ಟೆ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹಾಗಾಗಿ ಆಮ್ಲಜನಕ ಇಲ್ಲದೆ ಸತ್ತವರು, ಹಸಿವಿನಿಂದ ಸಾಯುವವರು, ಶ್ರಮದ ಬೆವರಿಗೆ ಬಲಿಯಾಗುವವರು ಈ ವ್ಯವಸ್ಥೆಯಲ್ಲಿ ಅಸ್ಮಿತೆ ಇಲ್ಲದವರಾಗಿಬಿಡುತ್ತಾರೆ. ಪ್ರತಿಯೊಬ್ಬ ಪ್ರಜೆಯ ಅನ್ನದ ಹಕ್ಕು, ಆರೋಗ್ಯದ ಹಕ್ಕು ಮತ್ತು ಜೀವನೋಪಾಯದ ಹಕ್ಕು ಭಾರತದ ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಹಕ್ಕುಗಳು. ಈ ಮೂರರಿಂದ ವಂಚಿತರಾಗುವ ಕೋಟ್ಯಂತರ ಜನರ ನಡುವೆ ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಎದೆಗವುಚಿಕೊಂಡು ಸ್ತುತಿಸುತ್ತಾ ಕುಳಿತಿದ್ದೇವೆ. ಹಾಗಾಗಿಯೇ ಪ್ರಭುತ್ವದ, ಆಡಳಿತಾರೂಢ ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯದಿಂದಲೇ ನಡೆಯುವ ಇಂತಹ ಹತ್ಯೆಗಳು ನಮಗೆ ಸಹಜ ಸಾವುಗಳು ಎನಿಸಿಬಿಡುತ್ತವೆ. ಹಣಕಾಸಿನ ಪರಿಹಾರದಲ್ಲಿ ಕೊನೆಗೊಳ್ಳುವ ಕ್ರಿಯೆಗಳಾಗಿಬಿಡುತ್ತವೆ.

ಅಸ್ಥಿ ವಿಸರ್ಜನೆಯ ಮೂಲಕ ಪವಿತ್ರ ನದಿ ನೀರಿನಲ್ಲಿ ತೊಳೆದುಹೋಗುವ ವಿದ್ಯಮಾನಗಳಾಗಿಬಿಡುತ್ತವೆ. ಈ ಅಸಹಜ ಸಾವುಗಳನ್ನು ಹೇಗೆ ತಡೆಗಟ್ಟಲು ಸಾಧ್ಯ ? ಈ ಪ್ರಶ್ನೆಗೆ ಜಡಗಟ್ಟಿದ ಆಳುವ ವರ್ಗಗಳಿಂದ ಉತ್ತರ ಪಡೆಯಲಾಗುವುದಿಲ್ಲ. ಸಂವಿಧಾನದಲ್ಲಿ ಉತ್ತರ ಕಂಡುಕೊಳ್ಳಬಹುದು. ಹಾಗಾದಲ್ಲಿ ಮಾತ್ರ ಈ ಹಂತಕ ಮಾರುಕಟ್ಟೆ ವ್ಯವಸ್ಥೆಯಿಂದ ವಿಮೋಚನೆ ಪಡೆಯಲು ಸಾಧ್ಯ. ಮನುಜ ಜೀವಗಳನ್ನೂ ಮಾರುಕಟ್ಟೆಯ ಸರಕುಗಳಂತೆ ಅಳೆದು ತೂಗಿ ವಿಲೇವಾರಿ ಮಾಡುವಂತಹ ಒಂದು ವ್ಯವಸ್ಥೆಯತ್ತ ಆತ್ಮನಿರ್ಭರ ಭಾರತ ದಾಪುಗಾಲು ಹಾಕುತ್ತಿದೆ. ಆಮ್ಲಜನಕ, ಲಸಿಕೆ ಮತ್ತು ಆಸ್ಪತ್ರೆ ಸೌಕರ್ಯಗಳ ಅವ್ಯವಸ್ಥೆ ಮತ್ತು ಅದನ್ನು ನಿರ್ವಹಿಸುತ್ತಿರುವ ರೀತಿಯೇ ಇದನ್ನು ಸೂಚಿಸುತ್ತದೆ. ಬಂಡವಾಳ, ಮಾರುಕಟ್ಟೆ ಮತ್ತು ಔದ್ಯಮಿಕ ಹಿತಾಸಕ್ತಿಯಿಂದಾಚೆಗೆ ಯೋಚಿಸುವ ವಿವೇಕವನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಇದನ್ನು ಸಮರ್ಥವಾಗಿ ಪೋಷಿಸುತ್ತದೆ.

ದೇಶದ ಆರೋಗ್ಯ ವ್ಯವಸ್ಥೆಯ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಸೌಕರ್ಯಗಳನ್ನು ಶೀಘ್ರವೇ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆ ಸೌಕರ್ಯಗಳನ್ನು ಉತ್ತಮಪಡಿಸಿ, ಸಮರ್ಪಕವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸುವ ಮೂಲಕ ಹಳ್ಳಿಯ ಜನತೆಗೆ ಮತ್ತು ಬಡ ಜನತೆಗೆ ಚಿಕಿತ್ಸಾ ಸೌಲಭ್ಯಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಹಾಗೆಯೇ ಕೊರೋನಾ ಸಂದರ್ಭದಲ್ಲಿ ನಮ್ಮ ದೇಶದ, ವಿಶೇಷವಾಗಿ ಹಳ್ಳಿಗಾಡಿನ ವೈದ್ಯಕೀಯ ಸೌಲಭ್ಯಗಳು ಮತ್ತು ಆಸ್ಪತ್ರೆಗಳ ದುಸ್ಥಿತಿಯನ್ನು ಕಂಡಿರುವ ಜನಸಾಮಾನ್ಯರೂ ಸಹ ತಮ್ಮ ಬದುಕುವ ಹಕ್ಕಿಗಾಗಿ, ಜೀವಿಸುವ ಹಕ್ಕುಗಳಿಗಾಗಿ, ಆಹಾರ ಮತ್ತು ಆರೋಗ್ಯದ ಹಕ್ಕುಗಳಿಗಾಗಿ ಹೋರಾಡಲು ಸಜ್ಜಾಗಬೇಕಿದೆ. ಸಂವಿಧಾನಾತ್ಮಕವಾಗಿ ನಮಗೆ ಒದಗಬೇಕಾದ ಸವಲತ್ತುಗಳನ್ನೂ ಸರ್ಕಾರಗಳು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಐಕ್ಯತಾ ಹೋರಾಟಗಳ ಮೂಲಕ ಈ ಹಕ್ಕುಗಳನ್ನು ಪ್ರತಿಪಾದಿಸಲು ಪ್ರಜೆಗಳು ಸಜ್ಜಾಗಬೇಕಿದೆ.