- ನಾ ದಿವಾಕರ

ಕರ್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ಸರ್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ  ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. 

ಈ ಪ್ರಕ್ರಿಯೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬುನಾದಿಯೇ ಶಿಥಿಲವಾಗುತ್ತಿರುವುದನ್ನು ಗಮನಿಸದೆ ಹೋದರೆ, ಬಹುಶಃ ಹಿಂದುತ್ವ ರಾಜಕಾರಣ, ಅಖಂಡ ರಾಷ್ಟ್ರದ ಕನಸನ್ನು ಸಾಕಾರಗೊಳಿಸುವ ನೆಪದಲ್ಲಿ ರಾಜ್ಯಗಳನ್ನು ಕೇಂದ್ರದ ಬಾಲಂಗೋಚಿಗಳನ್ನಾಗಿ ಮಾಡಿಬಿಡುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಅಥವಾ ವಿರೋಧ ಪಕ್ಷ ಮುಕ್ತ ಭಾರತವನ್ನು ತನ್ನ ಅಂತಿಮ ಗುರಿಯಾಗಿರಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಈ ಹಾದಿಯಲ್ಲಿ ಪ್ರಬಲ ಅಸ್ತ್ರಗಳಾಗಿ ನೆರವಾಗುವುದು ರಾಜ್ಯಗಳಲ್ಲಿ ಬೇರೂರಿರುವ ಒಬಿಸಿ ರಾಜಕಾರಣ ಮತ್ತು ಮೂಲತಃ ಜಾತಿ ರಾಜಕಾರಣದ ಸಮೀಕರಣಗಳು. ನವ ಉದಾರವಾದದ ಮಾರುಕಟ್ಟೆ ಆರ್ಥಿಕ ನೀತಿ ಮತ್ತು ಕಾರ್ಪೋರೇಟ್ ಕೇಂದ್ರಿತ ಅಭಿವೃದ್ಧಿ ಪಥದಲ್ಲಿ, ಹಣಕಾಸು ಬಂಡವಾಳದ ಮೇಲೆ ಮತ್ತು ಬಂಡವಾಳ ಹೂಡಿಕೆಯ ಮೂಲ ಆಕರಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಎಲ್ಲ ಜಾತಿ ಸಮುದಾಯಗಳೂ ಈ ಹೊಸ ಸಮೀಕರಣಕ್ಕೆ ಸುಲಭವಾಗಿ ಬಲಿಯಾಗುತ್ತವೆ. ಒಂದೆಡೆ ಜಾತಿ ಅಸ್ಮಿತೆಯನ್ನು ಕಾಪಾಡಿಕೊಂಡೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಭದ್ರ ಬುನಾದಿಯನ್ನು ನಿರ್ಮಿಸಿಕೊಂಡಿರುವ ಒಬಿಸಿ ಸಮುದಾಯಗಳು ಈ ಮಾರುಕಟ್ಟೆ ಆರ್ಥಿಕತೆಗೆ ರಾಯಭಾರಿಗಳಾಗಿಬಿಡುತ್ತವೆ. ಇದರ ಒಂದು ಆಯಾಮವನ್ನು ಕರ್ನಾಟಕದ ಲಿಂಗಾಯತ ರಾಜಕಾರಣದಲ್ಲಿ ನೋಡುತ್ತಿದ್ದೇವೆ.

ಲಿಂಗಾಯತ ಮತಬ್ಯಾಂಕುಗಳನ್ನು ಸುರಕ್ಷಿತವಾಗಿರಿಸಿಕೊಂಡೇ ರಾಜ್ಯದ ಪ್ರಬಲ ಲಿಂಗಾಯತ ನಾಯಕರಾದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವಲ್ಲಿ ಸಂಘಪರಿವಾರ ನಿಯಂತ್ರಿತ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯ ಹಿಂದೆ ಜಾತಿ ಸಮೀಕರಣವನ್ನು ಹೊರತುಪಡಿಸಿ ಮತ್ತಾವುದೇ ಬಲವಾದ ಕಾರಣಗಳು ಇಲ್ಲ ಎನ್ನುವುದೂ ನೂತನ ಸರ್ಕಾರದ ಕಾರ್ಯವೈಖರಿಯಿಂದಲೇ ಸ್ಪಷ್ಟವಾಗುತ್ತಿದೆ. ಹಿಂದುತ್ವ ರಾಜಕಾರಣದ ಸಂಘ ಪ್ರೇರಿತ ಕಾರ್ಯಸೂಚಿಯನ್ನು ತೆರೆಮರೆಯಲ್ಲಿ ಜಾರಿಗೊಳಿಸುತ್ತಿದ್ದ ಯಡಿಯೂರಪ್ಪ ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೊಮ್ಮಾಯಿ ಸರ್ಕಾರ ನೇರವಾಗಿಯೇ ಈ ಹೆಜ್ಜೆ ಇಟ್ಟಿದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿರುವುದು ಲಿಂಗಾಯತ ಸಮುದಾಯಕ್ಕೆ ಆತಂಕಕಾರಿಯಾಗಿ ಕಂಡರೂ, ಈ ಸಮುದಾಯದ ಆಂತರ್ಯದಲ್ಲಿರುವ ಬಂಡವಾಳದ ಆಧಿಪತ್ಯ ಮತ್ತು ಔದ್ಯಮಿಕ ಹಿತಾಸಕ್ತಿಗಳು ಬೊಮ್ಮಾಯಿಯವರಿಗೆ ಶ್ರೀರಕ್ಷೆಯಾಗುತ್ತವೆ.

ಏಕೆಂದರೆ ಬೊಮ್ಮಾಯಿಯವರ ಮುಂದಿನ ಹಾದಿಯ ನೀಲನಕ್ಷೆ ದೆಹಲಿಯಲ್ಲಿ ಮತ್ತು ನಾಗಪುರದಲ್ಲಿ ಈಗಾಗಲೇ ಸಿದ್ಧವಾಗಿದೆ. 2024ರ ಒಳಗೆ ಭಾರತದ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಿ, ಹಣಕಾಸು ಬಂಡವಾಳದ ನವಉದಾರವಾದದ ಕಾರ್ಯಸೂಚಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಕೇಂದ್ರ ಬಿಂದುವಾಗಿದೆ. ಅತಿ ಹೆಚ್ಚಿನ ಸಾರ್ವಜನಿಕ ಉದ್ದಿಮೆಗಳು ರಾಜ್ಯದಲ್ಲಿವೆ, ಅತಿ ದೀರ್ಘ ರೈಲು ಮಾರ್ಗಗಳು ಕರ್ನಾಟಕದ ಮೂಲಕ ಹಾದು ಹೋಗುತ್ತವೆ, ಸರ್ಕಾರಿ ಸ್ವಾಮ್ಯದಲ್ಲಿರುವ ಉತ್ಪಾದನಾ ಘಟಕಗಳ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಶೈಕ್ಷಣಿಕ ವಲಯದಲ್ಲಿ ರಾಜ್ಯದ ಐಐಎಸ್‍ಸಿ ಮತ್ತಿತರ ವಿದ್ಯಾ ಸಂಸ್ಥೆಗಳು ಜಾಗತಿಕ ಮನ್ನಣೆ ಗಳಿಸಿವೆ. ಈ ಶೈಕ್ಷಣಿಕ ಸಂಸ್ಥೆಗಳ ಖಾಸಗೀಕರಣ ಮತ್ತು ಕಾರ್ಪೋರೇಟೀಕರಣಕ್ಕೆ ಪೂರಕವಾದ ಹೊಸ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಅವಸರದಿಂದಲೇ ಜಾರಿಗೊಳಿಸಿರುವುದನ್ನೂ ಗಮನಿಸಬೇಕು.

ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಈ ದೇಶದ ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ, ತುಳಿತಕ್ಕೊಳಪಟ್ಟ ಜನಸಮುದಾಯಗಳು ಭೂಮಿಗಾಗಿ ಹೋರಾಡಬೇಕಿತ್ತು. ಶತಮಾನಗಳಿಂದಲೂ, ಎಲ್ಲ ದೇಶಗಳಲ್ಲೂ ಭೂಮಿಗಾಗಿ ನಡೆದ ಹೋರಾಟಗಳೇ ಆ ದೇಶಗಳ ಇತಿಹಾಸವನ್ನೇ ಬದಲಿಸಿರುವುದನ್ನು ನೋಡಿದ್ದೇವೆ. ಭಾರತದಲ್ಲೂ ಸಹ ಭೂಮಿಯೊಡಗಿನ ದುಡಿಯುವ ವರ್ಗಗಳ, ಶ್ರಮಜೀವಿಗಳ ಒಡನಾಟವನ್ನು ಮನಗಂಡಿದ್ದರಿಂದಲೇ ಡಾ ಬಿ ಆರ್ ಅಂಬೇಡ್ಕರ್ ಸಹ ಭೂಮಿಯ ರಾಷ್ಟ್ರೀಕರಣಕ್ಕಾಗಿ ಒತ್ತಾಯಿಸಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಭೂ ಹೋರಾಟಗಳು ಮೂಲತಃ ಎಡಪಂಥೀಯ ಹೋರಾಟಗಳೊಡನೆಯೇ ಬೆಳೆದುಬಂದಿವೆ. ಕರ್ನಾಟಕದಲ್ಲಿನ ಭೂ ಸಂಬಂಧಗಳನ್ನು ತುಲನಾತ್ಮಕವಾಗಿ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಇಂದು ದೇಶಾದ್ಯಂತ ಮತ್ತು ಕರ್ನಾಟಕದಲ್ಲೂ ಸಹ ಭೂಮಿಗಾಗಿ ಹೋರಾಡುತ್ತಿರುವುದು ಕಾರ್ಪೋರೇಟ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಈ ಎರಡು ವರ್ಗಗಳಿಗೆ ಆಶ್ರಯ, ಶ್ರೀರಕ್ಷೆ ನೀಡುವ ಬಂಡವಾಳಿಗ ವರ್ಗದ ರಾಜಕೀಯ ನಾಯಕರು. ಕಳೆದ ಮೂರು ದಶಕಗಳ ನಗರೀಕರಣ ಮತ್ತು ರಸ್ತೆ, ಮೇಲ್ಸೇತುವೆ, ಕಾರಿಡಾರ್ ಮತ್ತು ಚತುಷ್ಪಥದಿಂದ ದಶಪಥದವರೆಗಿನ ಹೆದ್ದಾರಿಯ ವಿಸ್ತರಣೆಯಲ್ಲಿ ಭೂಮಿಯನ್ನು ಕಳೆದುಕೊಂಡ ಲಕ್ಷಾಂತರ ರೈತರು ಇಂದು ಕೃಷಿ ಕಾರ್ಮಿಕರಾಗಿ, ಗ್ರಾಮೀಣ ಶ್ರಮಜೀವಿಗಳಾಗಿ, ನಗರಗಳಲ್ಲಿ ದಿನಗೂಲಿಗಳಾಗಿ ಬದುಕು ಸವೆಸುತ್ತಿದ್ದಾರೆ. 

ಈ ಅವಕಾಶವಂಚಿತ ನವ  ಶ್ರಮಜೀವಿಗಳ ಗುಂಪಿಗೆ ಮತ್ತಷ್ಟು ರೈತಾಪಿಯನ್ನು, ಗ್ರಾಮೀಣ ಬಡಜನತೆಯನ್ನು ತಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇನ್ನು ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಮತ್ತು ಕ್ರೋಢೀಕರಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಕೆಲವು ಸೂಕ್ಷ್ಮ ನಿರ್ಬಂಧಗಳಿರುವ ನೂತನ ಭೂ ಸ್ವಾಧೀನ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದ ಖಾಸಗೀಕರಣ ಮತ್ತು ಔದ್ಯಮೀಕರಣಕ್ಕೆ ಪ್ರಶಸ್ತ ಭೂಮಿಕೆಯನ್ನು ಒದಗಿಸಿದೆ. ನೈಸರ್ಗಿಕ ಸಂಪತ್ತು, ಸಂಪನ್ಮೂಲ ಮತ್ತು ಉತ್ಪಾದನೆಯ ಮೂಲಗಳನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ ಆತ್ಮನಿರ್ಭರ ಭಾರತದ ಯೋಜನೆಗಳಿಗೆ ಕರ್ನಾಟಕ ಪ್ರಸ್ತಭೂಮಿಯಾಗಿ ಪರಿಣಮಿಸಲಿದೆ.

ಹಾಗಾಗಿ ಶಿಕ್ಷಣ, ಉದ್ಯಮ, ಉತ್ಪಾದನೆ, ವಿಜ್ಞಾನ, ತಂತ್ರಜ್ಞಾನ, ಡಿಜಿಟಲ್ ವೇದಿಕೆ, ರಸ್ತೆ ಮತ್ತು ರೈಲು ಸಾರಿಗೆ, ವಿಮಾನಯಾನ ಹೀಗೆ ನವ ಉದಾರವಾದ ಕಾರ್ಪೋರೇಟ್ ಜಗತ್ತಿಗೆ ಅತ್ಯಮೂಲ್ಯ ತಳಹದಿಯನ್ನು ಒದಗಿಸಬಹುದಾದ ಎಲ್ಲ ವಲಯಗಳಲ್ಲೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಪ್ರತಿರೋಧವಿಲ್ಲದೆ ಅನುಷ್ಟಾನಗೊಳಿಸಲು ಕರ್ನಾಟಕದ ನೂತನ ಬೊಮ್ಮಾಯಿ ಸರ್ಕಾರ ನೆರವಾಗಲಿದೆ. ಈ ಕಾರ್ಪೋರೇಟ್ ಪ್ರಕ್ರಿಯೆಗೆ ಲಿಂಗಾಯತ ಧರ್ಮ ಅಥವಾ ಲಿಂಗಾಯತ ಮತಬ್ಯಾಂಕುಗಳು ಅಡ್ಡಿಯಾಗುವುದೂ ಇಲ್ಲ. ಏಕೆಂದರೆ ಇಲ್ಲಿ ಲಿಂಗಾಯತ ಸಮುದಾಯದ ಔದ್ಯಮಿಕ ಹಿತಾಸಕ್ತಿಗಳ ರಕ್ಷಣೆಯಾಗಿರುತ್ತದೆ. ಹಾಗಾಗಿಯೇ ಮೂಲೆಗುಂಪಾಗಿರುವ ಯಡಿಯೂರಪ್ಪ ಒಂದು ಪ್ರಾದೇಶಿಕ ಶಕ್ತಿಯಾಗಿಯೂ ರೂಪುಗೊಳ್ಳಲಾಗದಂತೆ ಬಿಜೆಪಿ ನಾಯಕತ್ವ ತನ್ನ ರಾಜಕೀಯ ಹೆಜ್ಜೆಗಳನ್ನಿಟ್ಟಿದೆ. 

ನವ ಉದಾರವಾದದ ಸಾಮ್ರಾಜ್ಯ ವಿಸ್ತರಣೆಗೆ ನೆರವಾಗುವುದರೊಂದಿಗೇ , ಬಿಜೆಪಿಯ ಹಿಂದುತ್ವ ರಾಜಕಾರಣವೂ ಊರ್ಜಿತವಾಗಬೇಕಾದರೆ ರಾಜ್ಯಗಳಲ್ಲಿ ಹಿಂದುತ್ವ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಹ ಸರ್ಕಾರಗಳು, ಮುಖ್ಯಮಂತ್ರಿಗಳು ಅತ್ಯವಶ್ಯವಾಗಿ ಬೇಕಾಗುತ್ತಾರೆ. ಬಸವರಾಜ ಬೊಮ್ಮಾಯಿ ಅಂತಹ ಒಂದು ಮೃದು ಹಿಂದುತ್ವ ಮುಖವಾಡದ ನಾಯಕರಾಗಿ ಹೊರಹೊಮ್ಮಿದ್ದಾರೆ. 1998ರ ವಾಜಪೇಯಿಯವರಂತೆ.  ಈಗಾಗಲೇ ಇತಿಹಾಸ ಪಠ್ಯಗಳಿಂದ ಹೊಸ ಧರ್ಮಗಳ ಉದಯದ ಬಗ್ಗೆ ಇರುವ ಪಾಠಗಳನ್ನು ಪರಿಷ್ಕರಿಸಲು ಸರ್ಕಾರ ಸಮಿತಿಯೊಂದನ್ನು ನೇಮಿಸಿದ್ದು, ಶಿಕ್ಷಣದ ಕೇಸರೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ನೂತನ ಗೃಹ ಸಚಿವರೂ ತಮ್ಮ ಬಾಲವಾಡಿಯ ಪಾಠಗಳನ್ನು ಇನ್ನೂ ಮರೆತಿಲ್ಲ ಎನ್ನುವುದನ್ನು ಮೈಸೂರು ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಸಾಬೀತುಪಡಿಸಿದ್ದಾರೆ.
 ಈ ಅಪಾಯಕಾರಿ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ಆರ್ಥಿಕ ನೀತಿಗಳ ವಿರುದ್ಧ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ, ದಮನಕಾರಿ ಕರಾಳ ಶಾಸನಗಳ ವಿರುದ್ಧ, ರಾಜ್ಯ ಸರ್ಕಾರದ ಕರಾಳ ಭೂಸ್ವಾಧೀನ ಕಾಯ್ದೆಯ  ವಿರುದ್ಧ ಮತ್ತು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಶಿಕ್ಷಣದ ಕೇಸರೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಜನಾಂದೋಲನಕ್ಕೆ ಪ್ರೇರಕವಾಗುವಂತಹ ಒಂದು ಕಾರ್ಯ ಯೋಜನೆಯನ್ನು, ಹೋರಾಟದ ನೀಲನಕ್ಷೆಯನ್ನು ಸಿದ್ಧಪಡಿಸುವಲ್ಲಿ ವಿರೋಧ ಪಕ್ಷಗಳು ಸೋತಿವೆ.

ಈ ಸಂದಿಗ್ಧತೆಯ ನಡುವೆಯೇ ಕರ್ನಾಟಕದ ಜನತೆ, ನವ ಉದಾರವಾದದ ವಿರುದ್ಧ, ಬಲಪಂಥೀಯ ರಾಜಕಾರಣದ ವಿರುದ್ಧ, ಜಾತಿ ರಾಜಕಾರಣದ ವಿರುದ್ಧ, ಕೋಮುವಾದಿ ಫ್ಯಾಸಿಸಂನ ಧಾಳಿಯ ವಿರುದ್ಧ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಕರಾಳ ಶಾಸನಗಳ ವಿರುದ್ಧ ಒಂದು ಪ್ರಬಲ ಪ್ರಾದೇಶಿಕ ಅಸ್ಮಿತೆಯ ಹೊರಾಟದ ಕನಸು ಕಟ್ಟಬೇಕಿದೆ.  ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕದ ಮಟ್ಟಿಗಾದರೂ, ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ನೀತಿಗಳನ್ನು ತಿರಸ್ಕರಿಸುವ, ಜಾತಿ ರಾಜಕಾರಣವನ್ನು ಮೀರಿದ, ಮತೀಯ ರಾಜಕಾರಣ ಮತ್ತು ಮತಾಂಧತೆಯನ್ನು ಹಿಮ್ಮೆಟ್ಟಿಸುವ, ಕೋಮುವಾದಿ ಫ್ಯಾಸಿಸ್ಟರ ಧಾಳಿಯನ್ನು ಸಮರ್ಥವಾಗಿ ಎದುರಿಸುವ ಹಾಗೂ ರಾಜ್ಯದ ಜನತೆ ಎದುರಿಸುತ್ತಿರುವ  ನಿತ್ಯ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಪರ್ಯಾಯ ರಾಜಕೀಯ ವೇದಿಕೆ ಇಂದು ಅತ್ಯವಶ್ಯವಾಗಿದೆ. ಇದು ಎಡಪಂಥೀಯ ಚಳುವಳಿಯ ಆದ್ಯತೆಯೂ ಆಗಬೇಕಿದೆ.